ಚೆನ್ನೈ: ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಅಳವಡಿಸಿಕೊಳ್ಳದಿದ್ದರೇ ಕೇಂದ್ರದ ಅನುದಾನ ಕಟ್ ಮಾಡುವ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಹೇಳಿಕೆ ದಕ್ಷೀಣ ಭಾರತದಲ್ಲಿ ತೀವ್ರ ವಿವಾದಕ್ಕೆ ಕಾರಣವಾಗಿದೆ.
ಈ ಮಾತುಗಳು ಸರ್ವಾಧಿಕಾರದ ಪ್ರತೀಕವಾಗಿದೆ ಎಂದು ತಮಿಳುನಾಡು ಸೇರಿದಂತೆ ದಕ್ಷಿಣ ಭಾರತದ ಬಹುತೇಕ ಜನ ಅಭಿಪ್ರಾಯಪಟ್ಟಿದ್ದಾರೆ.
ತ್ರಿಭಾಷಾ ನೀತಿಗೆ ಸಾಂವಿಧಾನಿಕ ಮಾನ್ಯತೆಯಿಲ್ಲ ಎಂದು ಹೇಳುವ ಮೂಲಕ ರಾಷ್ಟ್ರೀಯ ಶಿಕ್ಷಣ ನೀತಿ (ಎನ್ಇಪಿ) ೨೦೨೦ ಅನ್ನು ತಿರಸ್ಕರಿಸುವ ತಮಿಳು ನಾಡು ಸರ್ಕಾರದ ನಿರ್ಧಾರವನ್ನು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಸಮರ್ಥಿಸಿಕೊಂಡಿದ್ದಾರೆ.
ತ್ರಿಭಾಷಾ ನೀತಿಯು ಕಡ್ಡಾಯ ಎಂದು ಭಾರತೀಯ ಸಂವಿಧಾನದ ಯಾವ ಭಾಗದಲ್ಲಿ ಹೇಳಲಾಗಿದೆ ಎಂಬುದನ್ನು ಕೇಂದ್ರ ಶಿಕ್ಷಣ ಸಚಿವರು ಸ್ಪಷ್ಟಪಡಿಸಬಹುದೇ?” ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರನ್ನು ಸ್ಟಾಲಿನ್ ನೇರವಾಗಿ ಪ್ರಶ್ನಿಸಿದ್ದಾರೆ.
ಎನ್ಇಪಿ ೨೦೨೦ ರ ಬಗ್ಗೆ ತಮಿಳುನಾಡು ಸರ್ಕಾರ ತನ್ನ ನಿಲುವನ್ನು ರಾಜಕೀಯಗೊಳಿಸುತ್ತಿದೆ ಎಂಬ ಪ್ರಧಾನ್ ಅವರ ಆರೋಪಗಳಿಗೆ ಪ್ರತಿಕ್ರಿಯೆಯಾಗಿ ಮುಖ್ಯಮಂತ್ರಿ ಈ ಹೇಳಿಕೆ ನೀಡಿದ್ದಾರೆ.
ಶಿಕ್ಷಣವು ಸಂವಿಧಾನದ ಸಮವರ್ತಿ ಪಟ್ಟಿಯಲ್ಲಿರುವ ವಿಷಯವಾಗಿದೆ. ಅಂದರೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡಕ್ಕೂ ಅದರ ಮೇಲೆ ಅಧಿಕಾರವಿರುತ್ತದೆ ಎಂದು ಅವರು ಒತ್ತಿ ಹೇಳಿದರು.
ಕೇಂದ್ರ ಸರ್ಕಾರವು ಶಿಕ್ಷಣ ನೀತಿಗಳ ಮೇಲೆ ವಿಶೇಷ ನಿಯಂತ್ರಣವನ್ನು ಸಾಧಿಸಲು ಸಾಧ್ಯವಿಲ್ಲ ಎಂದು ಪ್ರತಿಪಾದಿಸಿದ ಅವರು, ಆಡಳಿತದಲ್ಲಿ ಒಕ್ಕೂಟ ವ್ಯವಸ್ಥೆಯ ಮಹತ್ವವನ್ನು ಪುನರುಚ್ಚರಿಸಿದರು.
“ಭಾರತವು ಹಲವು ರಾಜ್ಯಗಳ ಒಕ್ಕೂಟವಾಗಿದೆ ಮತ್ತು ಶಿಕ್ಷಣವು ಸಮವರ್ತಿ ಪಟ್ಟಿಯಲ್ಲಿದೆ. ಕೇಂದ್ರ ಸರ್ಕಾರವು ತನ್ನ ನಿರ್ಧಾರಗಳನ್ನು ಏಕಪಕ್ಷೀಯವಾಗಿ ಹೇರಲು ಸಾಧ್ಯವಿಲ್ಲ” ಎಂದು ಅವರು ಹೇಳಿದರು.
ತ್ರಿಭಾಷಾ ನೀತಿಯನ್ನು ರಾಜ್ಯವು ಅನುಸರಿಸದಿದ್ದರೆ ತಮಿಳುನಾಡಿಗೆ ಕೇಂದ್ರದಿಂದ ನೀಡಲಾಗುವ ಅನುದಾನವನ್ನು ತಡೆಹಿಡಿಯಬಹುದು ಎಂಬ ವರದಿಗಳನ್ನು ಉಲ್ಲೇಖಿಸಿದ ಅವರು, ಕೇಂದ್ರ ಸರ್ಕಾರದ ಈ ಕ್ರಮ ರಾಜಕೀಯ ಬ್ಲ್ಯಾಕ್ ಮೇಲ್ ಆಗಿದೆ ಎಂದರು.
“ಇಂಥ ಬೆದರಿಕೆಗಳನ್ನು ತಮಿಳರು ಸಹಿಸುವುದಿಲ್ಲ. ತಮಿಳುನಾಡು ತ್ರಿಭಾಷಾ ನೀತಿಯನ್ನು ಒಪ್ಪಿಕೊಳ್ಳದಿದ್ದರೆ ಅನುದಾನವನ್ನು ತಡೆಹಿಡಿಯಲಾಗುವುದು ಎನ್ನುವುದು ನೇರವಾಗಿ ಬೆದರಿಕೆ ಹಾಕುವ ಕ್ರಮವಾಗಿದೆ” ಎಂದು ಅವರು ಹೇಳಿದರು.
ತಮಿಳುನಾಡು ಯಾವುದೇ ವಿಶೇಷ ರಿಯಾಯಿತಿಗಳನ್ನು ಕೇಳುತ್ತಿಲ್ಲ, ಆದರೆ ಕೇವಲ ತನ್ನ ಸಾಂವಿಧಾನಿಕ ಹಕ್ಕುಗಳನ್ನು ಪ್ರತಿಪಾದಿಸುತ್ತಿದೆ ಎಂದು ಸ್ಟಾಲಿನ್ ಪುನರುಚ್ಚರಿಸಿದರು.
ಶಾಲೆಗಳಲ್ಲಿ ತಮಿಳಿಗೆ ಆದ್ಯತೆ ನೀಡುವ ಮೂಲಕ ತನ್ನ ಭಾಷಾ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸಲು ತಮಿಳುನಾಡು ಸರ್ಕಾರ ಬದ್ಧವಾಗಿದೆ ಎಂದು ರಾಜ್ಯ ಶಿಕ್ಷಣ ಸಚಿವ ಅನ್ಬಿಲ್ ಮಹೇಶ್ ಪೊಯ್ಯಮೋಳಿ ಹೇಳಿದ್ದಾರೆ.
ಹಿಂದಿ, ಸಂಸ್ಕೃತ ಮತ್ತು ಇಂಗ್ಲಿಷ್ ಅನ್ನು ಉತ್ತೇಜಿಸುವ ಎನ್ಇಪಿಯ ತ್ರಿಭಾಷಾ ಸೂತ್ರವನ್ನು ರಾಜ್ಯ ಸರ್ಕಾರ ನಿರಂತರವಾಗಿ ವಿರೋಧಿಸುತ್ತಿದೆ.