ತಿರುಪತಿ: ತಿರುಮಲೆಯ ಏಳು ಪವಿತ್ರ ಬೆಟ್ಟಗಳ ಪೈಕಿ ಒಂದರ ತಪ್ಪಲಿನಲ್ಲಿ ಐಷಾರಾಮಿ ರೆಸಾರ್ಟ್ ನಿರ್ಮಿಸುವುದನ್ನು ವಿರೋಧಿಸಿ ಸಾಧುಗಳು ಪ್ರತಿಭಟನೆ ನಡೆಸಿದ್ದಾರೆ.
ಸಾಧು ಪರಿಷತ್ ಅಧ್ಯಕ್ಷ ಶ್ರೀನಿವಾಸಾನಂದ ಸರಸ್ವತಿ ಸ್ವಾಮಿ ನೇತೃತ್ವದಲ್ಲಿ ಪ್ರತಿಭಟನಾನಿರತ ಪುರೋಹಿತರು ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಆಡಳಿತ ಕಟ್ಟಡದ ಮುಂದೆ ಅನಿರ್ದಿಷ್ಟ ಉಪವಾಸ ಸತ್ಯಾಗ್ರಹವನ್ನು ಪ್ರಾರಂಭಿಸಿದರು.
ಅಲಿಪಿರಿ ಶ್ರೀವಾರಿ ಮೆಟ್ಟಿಲುದಾರಿಯ ಬಳಿ ರೆಸಾರ್ಟ್ ನಿರ್ಮಾಣವನ್ನು ತಕ್ಷಣ ನಿಲ್ಲಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಹೋಟೆಲ್ ನಿರ್ಮಾಣವು ತಿರುಮಲ ಬೆಟ್ಟಗಳು ಮತ್ತು ಶ್ರೀ ವೆಂಕಟೇಶ್ವರ ದೇವಾಲಯದ ಪಾವಿತ್ರ್ಯಕ್ಕೆ ಅಪಾಯ ಉಂಟು ಮಾಡುತ್ತದೆ ಎಂದು ಪ್ರತಿಭಟನಾನಿರತ ಪುರೋಹಿತರು ಹುಯಿಲೆಬ್ಬಿಸಿದ್ದಾರೆ.
ತಿರುಮಲ ಸಂರಕ್ಷಣಾ ಯೋಜನೆಯನ್ನು ಪ್ರಾರಂಭಿಸಿದ ಸಿಎಮ ನಾಯ್ಡು ಮತ್ತು ಸನಾತನ ಧರ್ಮವನ್ನು ಬೆಂಬಲಿಸುವ ಡಿಸಿಎಂ ಪವನ್ ಮಧ್ಯೊರವೇಶಿಸಬೇಖು ಎಂದು ಆಗ್ರಹಿಸಿದರು.
ಐಷಾರಾಮಿ ಹೋಟೆಲ್ ನಿರ್ಮಾಣದ ವಿರುದ್ಧ ಇತ್ತೀಚಿನ ತಿಂಗಳುಗಳಲ್ಲಿ ನಡೆದ ಎರಡನೇ ಪ್ರತಿಭಟನೆ ಇದಾಗಿದೆ.
ಆಂಧ್ರಪ್ರದೇಶದ ಅನೇಕ ಧಾರ್ಮಿಕ ಗುಂಪುಗಳು ಮತ್ತು ವ್ಯಕ್ತಿಗಳು ವಿವಿಧ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದ್ದಾರೆ.
ಈ ರೀತಿಯ ಯೋಜನೆಯು ಧಾರ್ಮಿಕ ಭಾವನೆಗಳಿಗೆ ಮತ್ತು ಏಳು ಬೆಟ್ಟಗಳ ಪಾವಿತ್ರ್ಯಕ್ಕೆ ಧಕ್ಕೆ ತರುತ್ತದೆ ಎಂದು ಹೇಳಿದ್ದಾರೆ.
ಏನಿದು ಐಷಾರಾಮಿ ವಿಲ್ಲಾ ಯೋಜನೆ?
2021ರಲ್ಲಿ, ಜಗನ್ ಮೋಹನ್ ರೆಡ್ಡಿ ನೇತೃತ್ವದ ಆಂಧ್ರಪ್ರದೇಶ ಸರ್ಕಾರ ಪ್ರೋತ್ಸಾಹಕಗಳ ಮೂಲಕ ದೊಡ್ಡ ಪ್ರಮಾಣದ ಐಷಾರಾಮಿ ಪ್ರವಾಸೋದ್ಯಮ ಯೋಜನೆಯನ್ನು ಅಭಿವೃದ್ಧಿಪಡಿಸಲು ಪ್ರಸ್ತಾಪಿಸಿತು.
ಜಂಟಿ ಸಹಭಾಗಿತ್ವದಲ್ಲಿ ಡೆವಲಪರ್, ಅಂದರೆ ಒಬೆರಾಯ್ ಗ್ರೂಪ್ನ ಅಂಗಸಂಸ್ಥೆ (ಮುಮ್ತಾಜ್ ಹೋಟೆಲ್ಸ್ ಲಿ.) 20 ಎಕರೆ ಭೂಮಿಯಲ್ಲಿ ೧೦೦ ಐಷಾರಾಮಿ ವಿಲ್ಲಾಗಳ ಹೋಟೆಲನ್ನು 250 ಕೋಟಿ ರೂ.ಗಳ ಹೂಡಿಕೆಯೊಂದಿಗೆ ನಿರ್ಮಿಸಲಿದೆ.
ಸುಮಾರು 1500 ಉದ್ಯೋಗಗಳ ಸಾಮರ್ಥ್ಯವನ್ನು ಹೊಂದಿರುವ ಈ ಯೋಜನೆಯು ಬಹು-ಪಾಕಪದ್ಧತಿ, ಉತ್ತಮ ಊಟದ ರೆಸ್ಟೋರೆಂಟ್ಗಳು, ಕಾನ್ಫರೆನ್ಸ್ ಮತ್ತು ಔತಣಕೂಟ ಸೌಲಭ್ಯಗಳನ್ನು ಒಳಗೊಂಡಿರುತ್ತದೆ. ಅಲ್ಲದೆ ಕಾಫಿ ಶಾಪ್, ಬಾರ್ ಮತ್ತು ಲಾಂಜ್, ಸ್ಪಾ ಮತ್ತು ಫಿಟ್ನೆಸ್ ಕೇಂದ್ರ ಮತ್ತು ಈಜುಕೊಳದಂತಹ ಇತರ ಸೌಲಭ್ಯಗಳನ್ನು ಒಳಗೊಂಡಿರುತ್ತದೆ. ಇದಕ್ಕೆ ಪ್ರತಿಯಾಗಿ ಡೆವಲಪರ್ಗೆ ಸಬ್ಸಿಡಿ ಮತ್ತು ತೆರಿಗೆ ಪ್ರಯೋಜನ ಸಿಗಲಿದೆ.