ಕುಂಭ ಮೇಳಕ್ಕೆ ತೆರಳಿದ್ದ ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ 7 ಮಂದಿ ರಸ್ತೆ ಅಪಘಾತದಲ್ಲಿ ಅಸುನೀಗಿದ ಭಿಕರ ಘಟನೆ ಮಧ್ಯಪ್ರದೇಶದಲ್ಲಿ ಸಂಭವಿಸಿದೆ.
ಮಧ್ಯಪ್ರದೇಶದ ಜಬಲಪುರ ಪೆಹರಾ ಟೋಲ್ ನಾಕಾ ಬಳಿ ಸೋಮವಾರ ಮುಂಜಾನೆ ಸಂಭವಿಸಿದ ಭೀಕರ ಅಪಘಾತದಲ್ಲಿ ಗೋಕಾಕ್ ತಾಲೂಕಿನ ಲಕ್ಷ್ಮೀ ಬಡಾವಣೆಯ 7 ಮಂದಿ ಮೃತಪಟ್ಟಿದ್ದಾರೆ.
ಬಾಲಚಂದ್ರ ಗೌಡರ (50), ಸುನೀಲ್ ಶೇಡಶ್ಯಾಳೆ (45), ಬಸವರಾಜ್ ಕುರ್ತಿ (63), ಬಸವರಾಜ್ ದೊಡಮಾಳ್ (49), ಈರಣ್ಣ ಶೇಬಿನಕಟ್ಟಿ (27), ವಿರೂಪಾಕ್ಷ ಗುಮತಿ (61) ಮೃತಪಟ್ಟಿದ್ದು, ಮುಸ್ತಾಕ್ ಶಿಂಧಿಕುರಬೇಟ, ಸದಾಶಿವ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದ ತೀವ್ರತೆಗೆ ಕ್ರೂಸರ್ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ.
ಎರಡು ದಿನಗಳ ಹಿಂದೆ ಕ್ರೂಸರ್ ವಾಹನದಲ್ಲಿ ಕುಂಭಮೇಳಕ್ಕೆ 9 ತೆರಳಿದ್ದರು. ಸೋಮವಾರ ಮುಂಜಾನೆ ಚಾಲಕನ ನಿಯಂತ್ರಣ ತಪ್ಪಿದ ಕ್ರೂಸರ್ ವಾಹನ ಹಿಂಬದಿಯಿಂದ ಬಸ್ ಗೆ ಡಿಕ್ಕಿ ಹೊಡೆದು ಸ್ಥಳದಲ್ಲೇ 6 ಮಂದಿ ಮೃತಪಟ್ಟರೆ, ಒಬ್ಬ ಆಸ್ಪತ್ರೆಗೆ ಸಾಗಿಸುವಾಗ ದಾರಿಮಧ್ಯೆ ಅಸುನೀಗಿದ್ದಾರೆ.
ಕೆಲವು ದಿನಗಳ ಹಿಂದೆಯಷ್ಟೇ ಬೀದರ್ ನ 6 ಮಂದಿ ಉತ್ತರ ಪ್ರದೇಶದಲ್ಲಿ ಲಾರಿಗೆ ಹಿಂಬದಿಯಿಂದ ಕಾರು ಡಿಕ್ಕಿ ಹೊಡೆದು ಮೃತಪಟ್ಟಿದ್ದರು. ಮೃತರ ಶವಗಳನ್ನು ಸೋಮವಾರ ಬೀದರ್ ಗೆ ಕರೆತರಲಾಗುತ್ತಿದೆ. ಇದರ ನಡುವೆ ಮತ್ತೊಂದು ಅಪಘಾತದಲ್ಲಿ ಕರ್ನಾಟಕದ 7 ಮಂದಿ ಮೃತಪಟ್ಟಿರುವುದು ಆಘಾತ ತಂದಿದೆ.