ಮಹೇಶ್ ಜೋಶಿಗೆ ಬಿಗ್ ಶಾಕ್: 1 ಲಕ್ಷ ರೂ.ದಂಡ, ಬಹಿರಂಗ ಕ್ಷಮೆಯಾಚಿಸಲು ಕೋರ್ಟ್ ಸೂಚನೆ!

ಬೆಂಗಳೂರು ದೂರದರ್ಶನ ಕೇಂದ್ರದ ನಿವೃತ್ತ ಹೆಚ್ಚುವರಿ ಮಹಾನಿರ್ದೇಶಕ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಹೇಶ್ ಜೋಷಿಗೆ ಬಡ್ಡಿ ಸಹಿತ 1 ಲಕ್ಷ ರೂ. ದಂಡ ಪಾವತಿಸಬೇಕು ಹಾಗೂ ಪ್ರಮುಖ ದಿನಪತ್ರಿಕೆಗಳಲ್ಲಿ ಬಹಿರಂಗವಾಗಿ ಕ್ಷಮೆಯಾಚಿಸಬೇಕು ಎಂದು ಬೆಂಗಳೂರಿನ 14ನೇ ಸೆಷನ್ಸ್ ನ್ಯಾಯಾಲಯ ಆದೇಶಿಸಿದೆ.

ನ್ಯಾಯಾಧೀಶರಾದ ನಳಿನಾ ಕುಮಾರಿ ಈ ಆದೇಶ ಹೊರಡಿಸಿದ್ದು, ಬೆಂಗಳೂರಿನ ದೂರದರ್ಶನ ನಿರ್ದೇಶಕರಾಗಿದ್ದಾಗ ಮಹೇಶ್ ಜೋಷಿ, ಸಹದ್ಯೋಗಿಗಳಾದ ಮೋಹನ್ ರಾಂ ಮತ್ತು ಇತರೆ 6 ಮಂದಿ ವಿರುದ್ಧ ಪೊಲೀಸ್ ಠಾಣೆಯಲ್ಲಿ ಸುಳ್ಳು ದೂರು ದಾಖಲಿಸಿ ಸರ್ಕಾರಿ ಸೇವಾ ಸೌಲಭ್ಯ ಸಿಗದಂತೆ ಮಾಡಿದ ಆರೋಪ ವಿಚಾರಣೆ ವೇಳೆ ಸಾಬೀತಾಗಿತ್ತು.

ತೀರ್ಪು ಹೊರಬಿದ್ದ 7 ದಿನಗಳ ಒಳಗಾಗಿ ಬಹಿರಂಗ ಕ್ಷಮೆಯಾಚಿಸಿ ಪ್ರಮುಖ ದಿನಪತ್ರಿಕೆಗಳಲ್ಲಿ ಪ್ರಕಟಿಸಬೇಕು ಹಾಗೂ ಶೇ.24ರಷ್ಟು ಬಡ್ಡಿ ಸೇರಿ ಪ್ರಕರಣ ದಾಖಲಾದ ನಂತರದಿಂದ ಇಲ್ಲಿಯವರೆಗೂ ಶೇ.24ರಷ್ಟು ಬಡ್ಡಿ ಸೇರಿಸಿ 1 ಲಕ್ಷ ರೂ. ದಂಡ ಪಾವತಿಸಬೇಕು ಎಂದು ಸೂಚಿಸಿದೆ.

2004ರಲ್ಲಿ ಮೋಹನ್ ರಾಂ ಮತ್ತು ಸಹದ್ಯೋಗಿಗಳು ನಕಲಿ ದಾಖಲೆ ಸೃಷ್ಟಿಸಿ ತಮ್ಮ ನಿವೃತ್ತಿ ನಂತರದ ಸೇವಾ ಸೌಲಭ್ಯ ಸಿಗದಂತೆ ಮಾಡಲಾಗಿದೆ ಎಂದು ಆರೋಪಿಸಿ ಬೆಂಗಳೂರಿನ ಜೆಸಿ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಪೊಲೀಸರು ನ್ಯಾಯಾಲಯದಲ್ಲಿ ಮೋಹನ್ ರಾಂ ಮತ್ತಿತರ ಆರು ಜನರ ಮೇಲೆ ಸಂಚು ರೂಪಿಸಿ ನಕಲಿ ದಾಖಲೆ ಸೃಷ್ಟಿಸಿ, ನಕಲಿ ಸಹಿ ಹಾಕಿದ್ದಾರೆ ಎಂದು ಸಲ್ಲಿಸಿದ್ದ ಆರೋಪ ಪಟ್ಟಿ ಸಲ್ಲಿಸಿದ್ದರು. ಇದನ್ನು 2013ರಲ್ಲಿ ಕರ್ನಾಟಕ ಹೈಕೋರ್ಟ್ ಸುಳ್ಳು ಕೇಸೆಂದು ರದ್ದುಮಾಡಿತ್ತು. ತೀರ್ಪಿನಲ್ಲಿ ಮಹೇಶ ಜೋಷಿಯು ಸಲ್ಲಿಸಿದ್ದ ದೂರು ದುರುದ್ದೇಶದ್ದು ಮಾತ್ರವಲ್ಲ, ತನ್ನ ಸಹೋದ್ಯೋಗಿಗಳ ವಿರುದ್ಧ ಸೇಡು ತೀರಿಸಿಕೊಳ್ಳುವ ಸಲುವಾಗಿ ಹಾಕಿದ್ದೆಂದು ತೀರ್ಮಾನಿಸಿತ್ತು.

ದುರುದ್ದೇಶದ ಕೇಸು ದಾಖಲಿಸಿದ್ದ ಮಹೇಶ್ ಜೋಷಿ ವಿರುದ್ಧ ಮೋಹನ್ ರಾಂ ನ್ಯಾಯಾಲಯದಲ್ಲಿ ಕೇಸು ದಾಖಲಿಸಿ ಪರಿಹಾರ ಕೋರಿದ್ದರು. ಸುದೀರ್ಘ ವಿಚಾರಣೆಯ ನಂತರ ಮಹೇಶ್ ಜೋಷಿಯು ಮೋಹನ್ ರಾಂ ವಿರುದ್ಧ ದಾಖಲಿಸಿದ ಕೇಸು ದುರುದ್ದೇಶ ಪೂರ್ವಕವಾಗಿದೆ, ಆ ಕೇಸನ್ನು ಬಳಸಿಕೊಂಡು ಮೋಹನ್ ರಾಂ ಅವರ ಸೇವೆಯ ನಿವೃತ್ತಿ ಸೌಲಭ್ಯಗಳನ್ನು ತಡೆಹಿಡಿಯಲು ಮಹೇಶ್ ಜೋಷಿ ಪ್ರಯತ್ನಿಸಿರುವುದು ಸಾಬೀತಾಗಿದೆ.

ಪ್ರಕರಣದಂದ ಮೋಹನ್ ರಾಂ ಅವರಿಗೆ ದೈಹಿಕ ಹಾಗೂ ಮಾನಸಿಕ ಹಿಂಸೆಯಾಗುರುವುದರಿಂದ ಪರಿಹಾರವಾಗಿ ಬರುವ 7 ದಿನಗಳಲ್ಲಿ ಮಹೇಶ್ ಜೋಷಿ ಒಂದು ಲಕ್ಷ ರೂಪಾಯಿಗಳನ್ನು ಕೇಸು ದಾಖಲಿಸಿದ ದಿನದಿಂದ ವಾರ್ಷಿಕ ಶೇ.24 ರ ಲೆಕ್ಕದಲ್ಲಿ ಬಡ್ಡಿ ಸಮೇತ ಕೊಡಬೇಕು ಹಾಗೂ ರಾಜ್ಯದ ಪ್ರಮುಖ ದಿನಪತ್ರಿಕೆಗಳಲ್ಲಿ ಮತ್ತು ಬೆಂಗಳೂರು ದೂರದರ್ಶನದಲ್ಲಿ ಕ್ಷಮಾಪಣೆ ಕೋರಬೇಕು ಎಂದು ತೀರ್ಪು ತಿಳಿಸಿದೆ.

ಇವನ್ನು ಪಾಲಿಸದಿದ್ದಲ್ಲಿ ಮಹೇಶ್ ಜೋಷಿ ವಿರುದ್ಧ ನ್ಯಾಯಾಂಗ ನಿಂದನೆ ಮೊಕದ್ದಮೆ ಹೂಡುವ ಸ್ವಾತಂತ್ರ್ಯವನ್ನು ಮೋಹನ್ ರಾಂ ಅವರಿಗೆ ನ್ಯಾಯಾಲಯ ನೀಡಿದೆ. 7 ದಿನಗಳ ಕಾಲ ಬಂಧನಕ್ಕೆ ಒಳಗಾಗಬೇಕಾಗುತ್ತದೆ ಎಂದೂ ತೀರ್ಪಿನಲ್ಲಿ ತಿಳಿಸಿದೆ.

Post a Comment

Previous Post Next Post