ಬೆಂಗಳೂರು: ವಿದೇಶದಲ್ಲಿ ಉದ್ಯೋಗದ ವೀಸಾ ಮಾಡಿಸಿಕೊಡುವ ನಂಬಿಸಿ 51 ಮಂದಿಯಿಂದ 2.64 ಕೋಟಿಗೂ ಹೆಚ್ಚು ವಂಚನೆ ನಡೆಸಿದ್ದ ಖತರ್ನಾಕ್ ದಂಪತಿಯನ್ನು ಬಂಧಿಸಿ ಭರ್ಜರಿ ಬೇಟೆಯಾಡಿರುವ ಆಗ್ನೇಯ ವಿಭಾಗದ ಸಿಇಎನ್ ಪೊಲೀಸರು 66 ಲಕ್ಷ ನಗದು ಸೇರಿ 80 ಲಕ್ಷ ಮೌಲ್ಯದ ಮಾಲುಗಳನ್ನು ಜಪ್ತಿ ಮಾಡಿದ್ದಾರೆ.
ತಿಲಕ್ ನಗರದ ಎಸ್ ಆರ್ ಕೆ ಗಾರ್ಡನ್ ನ ಸಕ್ಲೈನ್ ಸುಲ್ತಾನ್ (28) ಹಾಗೂ ಆತನ ಪತ್ನಿ ನಿಖಾತ್ ಸುಲ್ತಾನ್ (25) ಬಂಧಿತ ಆರೋಪಿಗಳಾಗಿದ್ದು, ವಂಚನೆಯಲ್ಲಿ ಭಾಗಿಯಾಗಿದ್ದ ಮತ್ತೊಬ್ಬ ಮೊಹಮ್ಮದ್ ಶಾ ನವಾಜ್ ಬಂಧನಕ್ಕೆ ತೀವ್ರ ಶೋಧ ಕೈಗೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ದಯಾನಂದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಬಂಧಿತ ಆರೋಪಿಗಳಿಂದ 66 ಲಕ್ಷ ನಗದು, ಎಕ್ಸ್ ಯುವಿ ಕಾರು, ಒಂದು ಹೊಂಡಾ ಸಿಟಿ ಕಾರು,ಜಾವಾ,ಯಮಹಾ ಎಫ್ ಜಡ್ ಸೇರಿ ಎರಡು ಬೈಕ್ ಬೈಕ್, 24 ಗ್ರಾಂ ಚಿನ್ನಾಭರಣ ಸೇರಿದಂತೆ 80 ಲಕ್ಷ ಮೌಲ್ಯದ ಮಾಲುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದರು.
ಆರೋಪಿ ಸಕ್ಲೈನ್ ಸುಲ್ತಾನ್ ರೇಸ್ ಕೋರ್ಸ್ ನಲ್ಲಿ ಕುದುರೆ ಜಾಕಿಗಳ ಸಹಾಯಕನಾಗಿ ಕೆಲಸ ಮಾಡುತ್ತಿದ್ದು,ಅಲ್ಲಿಗೆ ಕುದುರೆ ಸವಾರಿ ಕಲಿಯಲು ಬರುತ್ತಿದ್ದ ನಿಖಾತ್ ಸುಲ್ತಾನ್ ನನ್ನು ಪ್ರೀತಿಸಿ ವಿವಾಹವಾಗಿದ್ದು,ಇವರಿಬ್ಬರು ದಿಢೀರ್ ಶ್ರೀಮಂತರಾಗಲು ಹೊರ ದೇಶಗಳಿಗೆ ವೀಸಾ ಮಾಡಿಸಿಕೊಡುವುದಾಗಿ ನಂಬಿಸಿ ವಂಚನೆ ನಡೆಸುತ್ತಿದ್ದರು ಎಂದರು.
ಬಡವರ ಕುಂಟುಂಬದ ಸಕ್ಲೈನ್ ಸುಲ್ತಾನ್ ವಂಚನೆಯಿಂದ ಬಂಗ್ಲೆಯಂತಹ ಮನೆಯಲ್ಲಿ ವಾಸಿಸುತ್ತಿದ್ದು ಪತ್ನಿ ನಿಖಾತ್ ಸುಲ್ತಾನ್ 5 ತಿಂಗಳ ಗರ್ಭಿಣಿಯಾಗಿದ್ದು ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು.
ಏನಿದು ಘಟನೆ?
ಆರೋಪಿ ನಿಖಾತ್ ಸುಲ್ತಾನ್ಗೆ ಈ ಹಿಂದೆ ಬೆಂಗಳೂರಿನ ರೇಸ್ ಕೋರ್ಸ್ನಲ್ಲಿ ಹಾರ್ಸ್ ರೈಡಿಂಗ್ ಕಲಿಯುತ್ತಿದ್ದಾಗ ವಿದೇಶಿ ಮೂಲದ ಜಾಕಿಯೊಬ್ಬನ ಪರಿಚಯವಾಗಿದೆ. ವಿದೇಶಗಳಲ್ಲಿ ಹಾರ್ಸ್ ಜಾಕಿ ಮತ್ತು ಇತರ ಕೆಲಸ ನಿರ್ವಹಿಸಲು ಆಸಕ್ತಿ ಹೊಂದಿರುವ ವ್ಯಕ್ತಿಗಳಿಗೆ ವೀಸಾ ಮಾಡಿಸಿಕೊಡುತ್ತೇನೆ. ಆಸಕ್ತರನ್ನು ಪರಿಚಯಿಸಿದರೆ ಒಂದು ವೀಸಾಗೆ 50 ಸಾವಿರ ರೂ. ಕಮಿಷನ್ ಹಣ ನೀಡುವುದಾಗಿ ತಿಳಿಸಿದ್ದ
ವಿದೇಶಿ ಜಾಕಿಯ ಆಫರ್ ಒಪ್ಪಿದ್ದ ಆರೋಪಿ ದಂಪತಿ ವಿದೇಶಗಳಲ್ಲಿ ಹಾರ್ಸ್ ಜಾಕಿಯಾಗಲು ಬಯಸುವವರಿಗೆ ವೀಸಾ ಮಾಡಿಸಿಕೊಡುವುದಾಗಿ ಫೇಸ್ಬುಕ್ನಲ್ಲಿ ಜಾಹೀರಾತು ನೀಡಿತ್ತು. ಅದರಂತೆ ಆರೋಪಿಗಳನ್ನು ಸಂಪರ್ಕಿಸಿದ್ದ ವ್ಯಕ್ತಿಯೊಬ್ಬರಿಗೆ ಆರಂಭದಲ್ಲಿ ಎರಡು ವೀಸಾಗಳನ್ನು ಮಾಡಿಸಿಕೊಟ್ಟು ನಂಬಿಕೆ ಗಳಿಸಿದ್ದರು.
ನಂತರ ಒಟ್ಟು 51 ಜನರಿಗೆ ವೀಸಾ ಮಾಡಿಸಿಕೊಡುವುದಾಗಿ ಒಟ್ಟು 2.64 ಕೋಟಿ ರೂ. ಹಣವನ್ನು ಪಡೆದುಕೊಂಡಿದ್ದರು. ಆದರೆ. ವೀಸಾ ಮಾಡಿಸಿಕೊಡದೇ ಆ ಹಣದಲ್ಲಿ ಶ್ರೀಲಂಕಾ, ದುಬೈ, ಗೋವಾ, ಊಟಿ ಇನ್ನಿತರ ಕಡೆಗಳಲ್ಲಿ ಸುತ್ತಾಡಿ ವಿಲಾಸಿ ಜೀವನ ನಡೆಸಿದ್ದರು. ವೀಸಾ ಕುರಿತು ಕೇಳಿದಾಗ ನಕಲಿ ವೀಸಾ ದಾಖಲೆಗಳನ್ನು ನೀಡಿದ್ದರು. ದಾಖಲೆಗಳು ನಕಲಿ ಎಂದು ತಿಳಿದಾಗ ವೀಸಾ ಮಾಡಿಸಿಕೊಡಲು ಮಧ್ಯಸ್ಥಿಕೆ ವಹಿಸಿದ್ದ ರಾಜಸ್ಥಾನದ ಜೋದ್ ಪುರ ಜಿಲ್ಲೆಯ ಮಗ್ ಸಿಂಗ್ ಕಳೆದ ಜ. 24ರಂದು ಆಗ್ನೇಯ ವಿಭಾಗದ ಸಿಇಎನ್ ಠಾಣೆಗೆ ದೂರು ನೀಡಿದ್ದರು.