ಬೆಂಗಳೂರು: ರಾಜ್ಯದಲ್ಲಿ ವಿದ್ಯುತ್ ಕೊರತೆ ಇಲ್ಲ, ಸಮಸ್ಯೆಯೂ ಇಲ್ಲ. ಕೃಷಿ ಪಂಪ್ ಸೆಟ್ಗಳಿಗೆ 7 ಗಂಟೆಗಳ ಕಾಲ ವಿದ್ಯುತ್ ಪೂರೈಸಲಾಗುವುದು ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ವಿಧಾನಸಭೆಯಲ್ಲಿ ಮಂಗಳವಾರ ಸ್ಪಷ್ಟಪಡಿಸಿದರು.
ಶೂನ್ಯವೇಳೆಯಲ್ಲಿ ಬಿಜೆಪಿಯ ಶಾಸಕ ಸಿದ್ದು ಸವದಿ, ವಿದ್ಯುತ್ ಕಡಿತದ ಬಗೆಗಿನ ಪ್ರಸ್ತಾಪಕ್ಕೆ ಪ್ರತಿಕ್ರಿಯಿಸಿದ ಸಚಿವರು, ಪಂಪ್ ಸೆಟ್ಗಳಿಗೆ ಇಡೀ ರಾಜ್ಯದಲ್ಲಿ ಪವರ್ ಕಟ್ ಇಲ್ಲ. 7 ಗಂಟೆ ವಿದ್ಯುತ್ ನೀಡುತ್ತಿದ್ದೇವೆ. ದುರಸ್ತಿ ಸಂದರ್ಭದಲ್ಲಿ ವಿದ್ಯುತ್ ಕಡಿತವಾಗಬಹುದು. ಇತ್ತೀಚೆಗೆ ಎಸ್ಕಾಂಗಳ ಸಭೆ ನಡೆಸಿದಾಗ ರಾಜ್ಯದಲ್ಲಿ ವಿದ್ಯುತ್ ಕೊರತೆ ಇಲ್ಲ ಎಂದು ತಿಳಿಸಲಾಗಿದೆ ಎಂದರು.
ದಿನದ 24 ಗಂಟೆ ವಿದ್ಯುತ್ ಪೂರೈಸುವ ನಿರಂತರ ಜ್ಯೋತಿ ಚಾಲ್ತಿಯಲ್ಲಿದೆ. ಕೃಷಿಗೆ ಏಳು ಗಂಟೆ ಪೂರೈಸುವ ವೇಳೆಯಲ್ಲಿ ನಿರಂತರ ಜ್ಯೋತಿಗೆ ಸಿಂಗಲ್ ಫೇಸ್ ನೀಡುವಂತೆ ಜನವರಿಯಲ್ಲೇ ಆದೇಶ ನೀಡಲಾಗಿದೆ. ಸಿಂಗಲ್ ಫೇಸ್ ಅನ್ನು ಬಲವಂತವಾಗಿ ತ್ರಿಫೇಸ್ ಮಾಡಿದರೆ ಒತ್ತಡ ಹೆಚ್ಚಾಗಿ ವಿದ್ಯುತ್ ಸಲಕರಣೆ ಸುಟ್ಟು ಹೋಗುತ್ತವೆ ಎಂದು ಎಚ್ಚರಿಸಿದರು.
ಪ್ರತಿಯೊಬ್ಬ ಎಕ್ಸಿಕ್ಯೂಟ್ ಇಂಜಿನಿಯರ್ಗಳು ಶಾಸಕರ ಜೊತೆ ಕಾಲಕಾಲಕ್ಕೆ ಚರ್ಚೆ ಮಾಡಿ ಸಮಸ್ಯೆ ತಿಳಿದುಕೊಂಡು, ಬಗೆಹರಿಸುವಂತೆ ಆದೇಶ ನೀಡಿದ್ದೇನೆ ಎಂದು ಸಚಿವರು ತಿಳಿಸಿದರು.
ಪ್ರವಾಸೋದ್ಯಮ ಮತ್ತಷ್ಟು ಅಭಿವೃದ್ಧಿ: ದಕ್ಷಿಣ ಕನ್ನಡ ಸೇರಿ ಕರಾವಳಿ ಭಾಗದಲ್ಲಿ ಸೌಹಾರ್ದತೆ ಕಾಪಾಡಿಕೊಂಡರೆ, ಪ್ರವಾಸೋದ್ಯಮ ಮತ್ತಷ್ಟು ಅಭಿವೃದ್ಧಿಯಾಗಲಿದೆ ಎಂದು ಸ್ಪೀಕರ್ ಯು.ಟಿ.ಖಾದರ್ ಸಲಹೆ ನೀಡಿದ್ದಾರೆ.
ಪ್ರಶ್ನೋತ್ತರದ ವೇಳೆಯಲ್ಲಿ, ಪುತ್ತೂರು ಕ್ಷೇತ್ರ ಶಾಸಕ ಅಶೋಕ್ ಕುಮಾರ್ ರೈ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಹಳಷ್ಟು ಕುದ್ರು, ದ್ವೀಪಗಳಿವೆ. ಹಲವು ವರ್ಷಗಳ ಹಿಂದೆ ಇಲ್ಲಿನ ಒಂದೆರಡು ಎಕರೆ ಜಾಗವನ್ನು ಇತರರಿಗೆ ಮಂಜೂರು ಮಾಡಲಾಗಿದೆ. ಅಲ್ಲಿ ಯಾರು ವಾಸ ಮಾಡುತ್ತಿಲ್ಲ. ಸದರಿ ಜಾಗಕ್ಕೆ ಪರಿಹಾರ ನೀಡಿ, ಮರು ಸ್ವಾದೀನ ಪಡಿಸಿಕೊಂಡರೆ, ಅಲ್ಲಿ ಸ್ಟಾರ್ ಹೋಟೆಲ್ಗಳನ್ನು ನಿರ್ಮಿಸಿ ಪ್ರವಾಸೋದ್ಯಮಕ್ಕೆ ಒತ್ತು ನೀಡಬಹುದು ಎಂದರು.
ಇದಕ್ಕೆ ಉತ್ತರಿಸಿದ ಸಚಿವ ಹೆಚ್.ಕೆ.ಪಾಟೀಲ್, ಗೆಜ್ಜೆಗಿರಿ ನಂದನ ಬಿತ್ತಿಲ್ ಕ್ಷೇತ್ರದ ಅಭಿವೃದ್ಧಿಗೆ ಈಗಾಗಲೇ ಹಣ ಬಿಡುಗಡೆ ಮಾಡಲಾಗಿದೆ. ನಾಯರ್ ಕುದ್ರು ಸೇರಿದಂತೆ ಇತರ ದ್ವೀಪಗಳ ಅಭಿವೃದ್ಧಿಗೆ ಒತ್ತು ನೀಡಲಾಗುವುದು ಎಂದರು.
ಸಭಾಧ್ಯಕ್ಷರು, ಪಾವರೂಲಿ ತೂಗು ಸೇತುವೆ ನಿರ್ಮಾಣಕ್ಕೆ ಆಧ್ಯತೆ ನೀಡುವಂತೆ ಸಲಹೆ ನೀಡಿದರು. ಅದಕ್ಕೆ ಸಚಿವರು ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದರು. ಶಾಸಕರ ಸಲಹೆಯಂತೆ ಮಂಜೂರಾಗಿರುವ ಭೂಮಿಯನ್ನು ಹಿಂಪಡೆಯಲು ಪರಿಶೀಲನೆ ನಡೆಸುವುದಾಗಿ ಸಚಿವರು ಭರವಸೆ ನೀಡಿದರು. ಕರಾವಳಿಯ ಪ್ರವಾಸೋದ್ಯಮಕ್ಕೆ ಮುಂದಿನ ಬಜೆಟ್ ನಲ್ಲಿ ವಿಶೇಷ ಅನುದಾನ ಮೀಸಲಿಡಬೇಕು ಎಂದು ಶಾಸಕರು ಆಗ್ರಹ ಮಾಡಿದರು.