ಬೆಂಗಳೂರು: ಎತ್ತಿನಹೊಳೆ ಯೋಜನೆಯಡಿ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಸಲಾಗುವುದು ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.
ವಿಧಾನಸಭೆಯಲ್ಲಿ ಶ್ರೀನಿವಾಸಪುರ ಶಾಸಕರಾದ ವಿಂಕಟಶಿವಾರೆಡ್ಡಿ ಜಿ.ಕೆ. ಇವರ ಪ್ರಶ್ನೆಗೆ ಉತ್ತಿರಿಸಿದ ಅವರು, ಎತ್ತಿನಹೊಳೆ ಯೋಜನೆಯಡಿಯ ಮೂಲ ಉದ್ದೇಶ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ಕುಡಿಯುವ ನೀರಿನ ಭವಣೆಯನ್ನು ನಿವಾರಿಸುವುದು ಹಾಗೂ ಅಂತರ್ಜಲ ಮಟ್ಟ ವೃದ್ಧಿಸುವುದು ಎಂದು ಮೂಲ ಡಿಪಿಆರ್ ನಲ್ಲಿ ಅನುಮೋದಿಸಲಾಗಿದೆ ಎಂದರು.
ಕೋಲಾರ ಲಿಫ್ಟ್ ಕಾಮಗಾರಿ 22.30 ಕಿಮೀ ಉದ್ದದ ಗುರುತ್ವ ಪೈಪ್ಲೈನ್ ನಿರ್ಮಾಣ ಕಾಮಗಾರಿಗಳು ವಿವಿಧ ಹಂತಗಳಲ್ಲಿ ಪ್ರಗತಿಯಲ್ಲಿದ್ದು, ಉಳಿಕೆ ಗುರುತ್ವ ಪೈಪ್ ಲೈನ್ ನಿರ್ಮಾಣ ಹಾಗೂ ಶ್ರೀನಿವಾಸಪುರ ಫೀಡರ್ ಪೈಪ್ಲೈನ್ ನಿರ್ಮಾಣ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಗುತ್ತಿಗೆ ವಹಿಸಲಾಗಿದ್ದು, ಅವುಗಳ ಪಂಕ್ಷೀಕರಣಗಳನ್ನು ಅಂತಿಮಗೊಳಿಸಿದ್ದು, ಭೂಸ್ವಾಧೀನ ಪ್ರಕ್ರಿಯೆ ಪ್ರಗತಿಯಲ್ಲಿರುತ್ತದೆ ಎಂದು ಅವರು ವಿವರಿಸಿದರು.
ಉಪ ಮುಖ್ಯಮಂತ್ರಿಗಳು, ಆಗಸ್ಟ್ 2025ರ ಅಂತ್ಯಕ್ಕೆ ಸದರಿ ಯೋಜನೆಯ ಎಲ್ಲಾ 8 ವಿಯರ್ ಗಳಿಂದ ಲಭ್ಯವಾಗಲಿರುವ 24.01 ಟಿ.ಎಂ.ಸಿ ನೀರನ್ನು ಮೇಲೆತ್ತಿ ಗುರುತ್ವ ಕಾಲುವೆ 231.00 ಕಿಮೀ (ತುಮಕೂರು)ವರೆಗೆ ನಾಲೆಗೆ ನೀರು ಹರಿಸಲು ಯೋಜಿಸಲಾಗಿದೆ. ಭೂಸ್ವಾಧೀನ ಪ್ರಕಿಯೆಯನ್ನು ಶೀಘ್ರವಾಗಿ ಪೂರ್ಣಗೊಳಿಸಿ ಕೋಲಾರ ಮತ್ತು ಶ್ರೀನಿವಾಸಪುರ ಫೀಡರ್ ಪೈಪ್ ಲೈನ್ ಕಾಮಗಾರಿಗಳನ್ನು 2025-26ನೇ ಸಾಲಿನಲ್ಲಿ ಪ್ರಾರಂಭಿಸಲಾಗುವುದು. ಈ ಯೋಜನೆಯನ್ನು ಮಾರ್ಚ್ 2027ರ ಅಂತ್ಯಕ್ಕೆ ಅನುದಾನದ ಲಭ್ಯತೆ ಮೇರೆಗೆ ಸಂಪೂರ್ಣವಾಗಿ ಪೂರ್ಣಗೊಳಿಸಲು ಕಾರ್ಯಕ್ರಮ ರೂಪಿಸಲಾಗಿದೆ ಎಂದು ತಿಳಿಸಿದರು.