ಬೆಂಗಳೂರು: ಅತ್ತೆಯನ್ನು ಸಾಯಿಸಲು ವೈದ್ಯರ ಬಳಿ ಮಾತ್ರೆ ಕೇಳಿದ್ದ ಸೊಸೆಯನ್ನು ಸಂಜಯನಗರದ ಪೊಲೀಸರು ಪತ್ತೆ ಹಚ್ಚಿದ್ದಾರೆ.
ಕೊಳ್ಳೇಗಾಲ ಮೂಲದ ಪತಿಯ ಜೊತೆ ಚೌಟ್ರಿಪಾಳ್ಯದಲ್ಲಿ ವಾಸವಾಗಿದ್ದರು. ದಂಪತಿಗೆ ಒಂದೂವರೆ ವರ್ಷದ ಮಗುವಿದೆ.
ಪತಿ ಕ್ಯಾಬ್ ಚಾಲಕನಾಗಿದ್ದು, ವೈದ್ಯರಿಗೆ ಮಾತ್ರೆ ಕೇಳಿದ್ದ ಮಾಹಿತಿ ತಿಳಿದು, ಆಕೆಯನ್ನು ಪೊಲೀಸ್ ಠಾಣೆಗೆ ಕರೆತಂದಿದ್ದಾರೆ.
ಅತ್ತೆ ಹಾಗೂ ಮಹಿಳೆ ನಡುವೆ ಯಾವುದೇ ಗಲಾಟೆ ಇರಲಿಲ್ಲ. ಮಹಿಳೆ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದು, ಸ್ವತಃ ತಾನೇ ಸಾಯಲು ಮಾತ್ರೆ ಕೇಳಿರುವುದಾಗಿ ತನಿಖೆ ವೇಳೆ ಹೊರಬಂದಿದೆ. ಜೊತೆಗೆ ಗೂಗಲ್ನಲ್ಲಿ ಸರ್ಚ್ ಮಾಡಿ ಮಹಿಳೆ ಡಾಕ್ಟರ್ ನಂಬರ್ ಪಡೆದಿದ್ದರು ಎಂದು ತಿಳಿದು ಬಂದಿದೆ.
ಖುದ್ದು ವೈದ್ಯರ ಮುಂದೆಯೇ ಸಂಜಯ್ ನಗರ ಪೊಲೀಸರು ಮಹಿಳೆಯನ್ನು ವಿಚಾರಣೆ ಮಾಡಿದ್ದು, ಮಹಿಳೆಗೆ ಸದ್ಯ ಕೌನ್ಸಲಿಂಗ್ ನೀಡಲು ನಿರ್ಧರಿಸಲಾಗಿದೆ.
ಏನಿದು ಪ್ರಕರಣ?
ಅತ್ತೆಯನ್ನು ಕೊಲ್ಲಲು ಸೊಸೆ ವೈದ್ಯರ ಬಳಿಯೇ ಮಾತ್ರೆ ಕೇಳಿದ ಘಟನೆಯೊಂದು ಬೆಂಗಳೂರಿನಲ್ಲಿ ನಡೆದಿತ್ತು. ಡಾಕ್ಟರ್ ಸುನೀಲ್ ಕುಮಾರ್ ಎನ್ನುವವರಿಗೆ ವಾಟ್ಸಾಪ್ನಲ್ಲಿ ಸಂಪರ್ಕಿಸಿ, ನಮ್ಮ ಅತ್ತೆ ತುಂಬಾ ಹಿಂಸೆ ಕೊಡುತ್ತಿದ್ದಾರೆ. ಅವರಿಗೆ ವಯಸ್ಸಾಗಿದೆ. ಅವರನ್ನು ಹೇಗೆ ಸಾಯಿಸೋದು? ಒಂದೆರೆಡು ಮಾತ್ರೆ ತೆಗೆದುಕೊಂಡರೆ ಸಾಯುತ್ತಾರಲ್ಲ, ಅದನ್ನು ಹೇಳಿ ಎಂದು ಮೆಸೇಜ್ ಮೂಲಕ ಕೇಳಿದ್ದರು.
ಮಹಿಳೆ ಮಾತ್ರೆ ಕೇಳುವಾಗ ಈ ತರ ಮಾತ್ರೆ ಕೇಳುವುದು ತಪ್ಪು ಎಂದು ವೈದ್ಯರು ಬುದ್ಧಿಮಾತು ಹೇಳಿದ್ದರು. ವೈದ್ಯರು ಬುದ್ಧಿ ಹೇಳುತ್ತಿದ್ದಂತೆ, ವಾಟ್ಸಾಪ್ ಚಾಟ್ ಡಿಲೀಟ್ ಮಾಡಿದ ಮಹಿಳೆ ಡಾಕ್ಟರ್ ನಂಬರ್ನ ಬ್ಲಾಕ್ ಮಾಡಿದ್ದರು. ಇದಕ್ಕಿಂತ ಮುಂಚೆಯೇ ಸ್ಕ್ರೀನ್ಶಾಟ್ ಪಡೆದಿದ್ದ ವೈದ್ಯ ಸುನೀಲ್ ಕುಮಾರ್ ಸಂಜಯನಗರ ಪೊಲೀಸರಿಗೆ ಮಾಹಿತಿ ನೀಡಿ, ತನಿಖೆ ಮಾಡಿ ಎಂದು ಮನವಿ ಮಾಡಿದ್ದರು.