ಮಹಾಕುಂಭ ಮೇಳ ನಡೆಯುತ್ತಿರುವ ಉತ್ತರ ಪ್ರದೇಶದ ಪ್ರಯಾಗ್ ರಾಜ್ ನ ನದಿಗಳು ಕನಿಷ್ಠ ಸ್ನಾನ ಮಾಡಲು ಯೋಗ್ಯವಲ್ಲದಷ್ಟು ಮಲೀನವಾಗಿದ್ದು, ಮಲ ಬ್ಯಾಕ್ಟಿರಿಯಾಗಳು ಕಾಣಿಸಿಕೊಂಡಿವೆ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ) ವರದಿ ನೀಡಿದೆ.
ರಾಷ್ಟ್ರೀಯ ಹಸಿರು ನ್ಯಾಯಮಂಡಳಿಗೆ ನೀಡಿರುವ ವರದಿಯಲ್ಲಿ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ನದಿಯ ಕೆಲವು ಭಾಗಗಳಲ್ಲಿ ಗರಿಷ್ಠ 2500 ಯೂನಿಟ್ ಗಳವರೆಗೆ ಮಲ ಬ್ಯಾಕ್ಟಿರಿಯಾ ಕಂಡು ಬಂದಿವೆ. ನಿಯಮದ ಪ್ರಕಾರ 100 ಮಿಲಿಗಿಂತ ಕಡಿಮೆ ಬ್ಯಾಕ್ಟಿರಿಯಾ ಇದ್ದರೆ ಸ್ನಾನಕ್ಕೆ ಯೋಗ್ಯ ಎಂದು ಪರಿಗಣಿಸಲಾಗುತ್ತದೆ.
ಹಸಿರು ನ್ಯಾಯಮಂಡಳಿ ಅಧ್ಯಕ್ಷ ನ್ಯಾಯಮೂರ್ತಿ ಪ್ರಕಾಶ್ ಶ್ರೀವಾಸ್ತವ್, ಸದಸ್ಯರಾದ ನ್ಯಾಯಮೂರ್ತಿ ಸುಧೀರ್ ಅಗರ್ವಾಲ್ ಮತ್ತು ತಜ್ಞರಾದ ಎ.ಸೆಂಥಿಲ್ ವೆಲ್ ಅವರನ್ನೊಳಗೊಂಡ ಪೀಠ ಗಂಗಾ ಮತ್ತು ಯಮುನಾ ನದಿಗಳ ಶುದ್ದೀಕರಣ ಕಾರ್ಯದ ವಿಚಾರಣೆ ವೇಳೆ ಈ ಅಂಶವನ್ನು ಬಹಿರಂಗಪಡಿಸಿದೆ.
ಮಹಾಕುಂಭ ಮೇಳದಲ್ಲಿ ತ್ರಿವೇಣಿ ಸಂಗಮದ ಬಳಿಯ ಸ್ನಾನ ಘಟ್ಟಗಳಲ್ಲಿ ನೀರಿನ ಗುಣಮಟ್ಟ ಕಾಯ್ದುಕೊಳ್ಳಲು ನೀಡಲಾಗಿದ್ದ ಮಾರ್ಗಸೂಚಿಗಳನ್ನು ಉಲ್ಲಂಘಿಸಲಾಗಿದೆ ಎಂದು ಫೆಬ್ರವರಿ ೩ರಂದು ಹಸಿರು ನ್ಯಾಯಮಂಡಳಿಗೆ ಸಿಪಿಸಿಬಿ ಸಲ್ಲಿಸಿದ ವರದಿಯಲ್ಲಿ ಆರೋಪಿಸಿದೆ.
ಕುಂಭ ಮೇಳದ ಹಲವು ಭಾಗಗಳಲ್ಲಿ ನೀರಿನ ಗುಣಮಟ್ಟ ಕುರಿತು ಪರಿಶೀಲನೆ ನಡೆಸಿದಾಗ ಗುಣಮಟ್ಟ ಕಾಯ್ದುಕೊಳ್ಳದೇ ಇರುವುದು ದೃಢಪಟ್ಟಿದೆ. ಪುಣ್ಯ ಸ್ನಾನದ ವೇಳೆ ಲಕ್ಷಾಂತರ ಜನರು ಸ್ನಾನ ಮಾಡುವುದರಿಂದ ಮಲ ಸಾಂದ್ರತೆ ಹೆಚ್ಚಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಕುಂಭ ಮೇಳದ ವೇಳೆ ನದಿಗಳ ಸ್ನಾನ ಘಟ್ಟಗಳಲ್ಲಿ ನೀರಿನ ಗುಣಮಟ್ಟ ಕಾಯ್ದುಕೊಳ್ಳುವ ಕುರಿತು ಕೈಗೊಂಡ ಕ್ರಮಗಳ ಬಗ್ಗೆ ಕೇಳಿದ ವರದಿಯನ್ನು ಉತ್ತರ ಪ್ರದೇಶ ಮಾಲಿನ್ಯ ನಿಯಂತ್ರಣ ಮಂಡಳಿ (UPPCB) ಇನ್ನೂ ನೀಡಿಲ್ಲ ಎಂಬುದನ್ನು ನ್ಯಾಯಮಂಡಳಿ ಗಮನಿಸಿದೆ.