ಅತ್ತೆಯನ್ನು ಕೊಲ್ಲಲು ಸೊಸೆ ವೈದ್ಯರ ಬಳಿಯೇ ಮಾತ್ರೆ ಕೇಳಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಸಂಜಯ್ ನಗರದಲ್ಲಿರುವ ವೈದ್ಯರೊಬ್ಬರು ಅತ್ತೆಯನ್ನು ಕೊಲ್ಲಲು ಮಾತ್ರೆ ಬರೆದುಕೊಡಿ ಎಂದು ಮಹಿಳೆಯೊಬ್ಬರು ಮಾಡಿದ ಮೆಸೇಜ್ ನೋಡಿ ಶಾಕ್ ಆಗಿದ್ದಾರೆ.
ಅತ್ತೆ ಜೊತೆಗಿನ ಜಗಳಕ್ಕೆ ರೋಸಿ ಹೋದ ಸೊಸೆ, ಅವರನ್ನು ಕೊಲ್ಲುವ ಉದ್ದೇಶಿಸಿದ್ದು, ಹೇಗೆ ಕೊಲ್ಲಬೇಕು ಎಂದು ತಿಳಿಯದೇ ವೈದ್ಯ ಸುನೀಲ್ ಕುಮಾರ್ ಎಂಬುವವರನ್ನು ವಾಟ್ಸಪ್ ಮೂಲಕ ಸಂಪರ್ಕಿಸಿ ಸಲಹೆ ಕೇಳಿದ್ದಾರೆ.
ನಮ್ಮ ಅತ್ತೆ ತುಂಬಾ ಹಿಂಸೆ ಕೊಡುತ್ತಿದ್ದಾರೆ. ಅವರಿಗೆ ವಯಸ್ಸಾಗಿದೆ. ಅವರನ್ನು ಹೇಗೆ ಸಾಯಿಸೋದು? ಒಂದೆರೆಡು ಮಾತ್ರೆ ತೆಗೆದುಕೊಂಡರೆ ಸಾಯುತ್ತಾರಲ್ಲ, ಅದನ್ನು ಹೇಳಿ ಎಂದು ಮೆಸೇಜ್ ಮಾಡಿ ಮಹಿಳೆ ಕೇಳಿದ್ದಾರೆ. ಈ ಸಂದೇಶ ನೋಡಿ ಆಘಾತಕ್ಕೆ ಒಳಗಾದ ವೈದ್ಯ ಸಂಜಯ ನಗರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ವೈದ್ಯರು ಯಾಕೆ ನನ್ನನ್ನು ಸಂಪರ್ಕಿಸಬೇಕು ಎಂದು ಪ್ರಶ್ನಿಸಿದಾಗ ನಾನು ಹೇಳಿದರೆ ನೀವು ಬೈಯ್ಯುತ್ತಿರಾ ಎಂದು ಪ್ರತಿಕ್ರಿಯಿಸಿದ್ದಾರೆ. ಅಂದರೆ ಎಂದು ಮರು ಪ್ರಶ್ನಿಸಿದಾಗ ನಾನು ಹೇಳುವ ವಿಷಯ ಕೇಳಿ ನೀವು ಬೈಯ್ಯಬಹುದು ಎಂದು ಹೇಳಿದ್ದಾರೆ.
ಪರ್ವಾಗಿಲ್ಲ ಹೇಳಿ ಎಂದು ವೈದ್ಯರು ಹೇಳಿದಾಗ ಕೊಲ್ಲಲು ಎಂದು ಹೇಳಿದ್ದಾರೆ. ಯಾರನ್ನ ಅಂದರೆ ಅತ್ತೆನ ಎಂದು ಮರು ಉತ್ತರ ನೀಡಿದ್ದಾರೆ. ಯಾಕೆ ಅಂದರೆ ಆಕೆ ತುಂಬಾ ಕಾಟ ಕೊಡ್ತಾರೆ ಎಂದು ಮಹಿಳೆ ಸಂದೇಶ ಕಳುಹಿಸಿದ್ದಾರೆ.
ಮಹಿಳೆ ಮಾತ್ರೆ ಕೇಳುವಾಗ ಈ ತರ ಮಾತ್ರೆ ಕೇಳುವುದು ತಪ್ಪು ಎಂದು ವೈದ್ಯರು ಬುದ್ಧಿಮಾತು ಹೇಳಿದ್ದಾರೆ. ವೈದ್ಯರು ಬುದ್ಧಿ ಹೇಳುತ್ತಿದ್ದಂತೆ, ವಾಟ್ಸಾಪ್ ಚಾಟ್ ಡಿಲೀಟ್ ಮಾಡಿದ ಮಹಿಳೆ ಡಾಕ್ಟರ್ ನಂಬರ್ ಬ್ಲಾಕ್ ಮಾಡಿದ್ದಾರೆ. ಇದಕ್ಕಿಂತ ಮುಂಚೆಯೇ ಸ್ಕ್ರೀನ್ಶಾಟ್ ಪಡೆದಿದ್ದ ವೈದ್ಯ ಸುನೀಲ್ ಕುಮಾರ್ ಸಂಜಯ್ ನಗರ ಪೊಲೀಸರಿಗೆ ಮಾಹಿತಿ ನೀಡಿ, ತನಿಖೆ ಮಾಡಿ ಎಂದು ಮನವಿ ಮಾಡಿದ್ದಾರೆ.
ಅತ್ತೆಯನ್ನು ಸಾಯಿಸಲು ಮಾತ್ರೆ ಕೇಳಿದ ಮಹಿಳೆಯ ಫೋನ್ ಸ್ವಿಚ್ಡ್ಆಫ್ ಆಗಿದ್ದು, ಪೊಲೀಸರು ಮಹಿಳೆಯನ್ನು ಪತ್ತೆ ಹಚ್ಚಿದ ಬಳಿಕ ಅಸಲಿ ಸತ್ಯ ಬಯಲಿಗೆ ಬರಲಿದೆ.