ಮದುವೆ ಮನೆಯಲ್ಲಿ ವಧುವಿನ ಸ್ನೇಹಿತೆಗೆ ಹಾರ ಹಾಕಿದ ವರ: ಕಪಾಳಮೋಕ್ಷ ಮಾಡಿದ ವಧು!

ಕುಡಿದ ಮತ್ತಿನಲ್ಲಿದ್ದ ವರ ವಧುವಿನ ಬದಲು ಆಕೆಯ ಸ್ನೇಹಿತೆಗೆ ಹಾರ ಹಾಕಿದ್ದರಿಂದ ಮದುವೆ ನಿಂತು ಹೋದ ಘಟನೆ ಉತ್ತರ ಪ್ರದೇಶದ ರಾಯ್ ಬರೇಲಿಯಲ್ಲಿ ನಡೆದಿದೆ.

ಶನಿವಾರ ಈ ಘಟನೆ ನಡೆದಿದ್ದು, 26 ವರ್ಷದ ರವೀಂದ್ರ ಕುಮಾರ್ ಎಂಬ ವರನ ಜೊತೆಗಿನ ಮದುವೆಯನ್ನು ರದ್ದುಗೊಳಿಸಿದ ವಧು 21 ವರ್ಷದ ರಾಧಾ ದೇವಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಮದುವೆ ದಿನ ಎರಡೂ ಕುಟುಂಬದವರು ಚೇರ್ ಗಳನ್ನು ಎಸೆದು ಹೊಡೆದಾಡಿಕೊಂಡಿದ್ದು, ಪೊಲೀಸರು ಮಧ್ಯಪ್ರವೇಶಿಸಿ ಘರ್ಷಣೆಯನ್ನು ನಿಲ್ಲಿಸಿದ್ದಾರೆ.

ಒಂದು ಮೂಲದ ಪ್ರಕಾರ ವಧು ರಾಧಾ ದೇವಿ ಕುಟುಂಬದವರು ಪೊಲೀಸರಿಗೆ ವರದಕ್ಷಿಣೆ ಕಿರುಕುಳದ ದೂರು ನೀಡಿದ್ದು, ಮದುವೆ ಮಾತುಕತೆ ವೇಳೆ 2.5 ಲಕ್ಷ ರೂ. ನೀಡಿದ್ದು, ಮದುವೆ ನಡೆಯುವ ದಿನ ಬೆಳಿಗ್ಗೆ 2 ಲಕ್ಷ ರೂ. ನೀಡಿದ್ದೇವೆ. ಆದರೆ ಇನ್ನೂ ಹಣ ನೀಡುವಂತೆ ವರನ ಕಡೆಯವರು ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.

ಮತ್ತೊಂದು ಮೂಲದ ಪ್ರಕಾರ ವರ ರವೀಂದ್ರ ಕುಮಾರ್ ಗೆ ಈ ಮದುವೆ ಇಷ್ಟವಿರಲಿಲ್ಲ. ಇದರಿಂದ ಮದುವೆ ಮಂಟಪಕ್ಕೆ ಕುಡಿದು ಬಂದಿದ್ದ. ಇದನ್ನು ಪ್ರಶ್ನಿಸಿದಾಗ ಆತ ಗಲಾಟೆ ಮಾಡಿದ್ದಾನೆ. ಹಾರ ಬದಲಾಯಿಸುವ ಸಂದರ್ಭದಲ್ಲಿ ವಧುಗೆ ಹಾರ ಹಾಕುವ ಬದಲು ಪಕ್ಕದಲ್ಲಿ ನಿಂತಿದ್ದ ಆಕೆಯ ಸ್ನೇಹಿತೆಗೆ ಹಾಕಿದ್ದಾನೆ.

ವಧುವಿನ ದೂರಿನ ಅನ್ವಯ ವರ ಹಾಗೂ ಆತನ ಸ್ನೇಹಿತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಮದುವೆ ದಿನ ಸ್ನೇಹಿತ ಕಳ್ಳಬಟ್ಟಿ ಸಾರಾಯಿ ನೀಡಿದ್ದಾನೆ ಎಂದು ಹೇಳಾಲಾಗಿದ್ದು, ಪೊಲೀಸರು ವರದಕ್ಷಿಣೆ ಕಿರುಕುಳ ಹಾಗೂ ಅಕ್ರಮ ಮದ್ಯ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Post a Comment

Previous Post Next Post