ವಿಧಾನಸೌಧದಲ್ಲಿ ಕೆಲಸ ಮಾಡುತ್ತಿದ್ದೇನೆ. ನಿಮ್ಮ ಮಕ್ಕಳಿಗೆ ದುಡ್ಡು ಕೊಟ್ಟರೆ ಕೆಲಸ ಕೊಡಿಸುತ್ತೇನೆ ಎಂಬದು ನಂಬಿಸಿ ಸುಮಾರು ೩೦ಕ್ಕೂ ಹೆಚ್ಚು ಜನರಿಗೆ ಕೋಟ್ಯಂತರ ರೂಪಾಯಿ ವಂಚಿಸಿದ ವ್ಯಕ್ತಿಯನ್ನು ಪೊಲೀಸರು ಮಂಡ್ಯದಲ್ಲಿ ಬಂಧಿಸಿದ್ದಾರೆ.
ಮಂಡ್ಯ ನಗರದ ತಾವರೆಗೆರೆ ನಿವಾಸಿ ಹೆಚ್.ಸಿ.ವೆಂಕಟೇಶ್ ಬಂಧಿತ ವಂಚಕ.
ತಾನೊಬ್ಬ ದೊಡ್ಡ ಅಧಿಕಾರಿ ಎಂದು ಬಿಂಬಿಸಿಕೊಂಡಿದ್ದ ವೆಂಕಟೇಶ್, ನಿಮ್ಮ ಮಕ್ಕಳಿಗೆ, ನಿಮ್ಮ ಹೆಂಡತಿಗೆ ಸರ್ಕಾರಿ ಕೆಲಸ ಕೊಡಿಸುತ್ತೇನೆ ಎಂದು ನಂಬಿಸಿ ಕೋಟ್ಯಂತರ ರೂಪಾಯಿ ವಂಚಿಸಿದ್ದಾನೆ.
ವೆಂಕಟೇಶ್ ತಾವರಗೆರೆಯ ಗಾಯತ್ರಿ ಎಂಬವರಿಗೆ ನಿಮ್ಮ ಮೂವರು ಮಕ್ಕಳಿಗೆ ಅಬಕಾರಿ ಇಲಾಖೆಯಲ್ಲಿ ಡ್ರೈವರ್ ಕೆಲಸ ಕೊಡಿಸುತ್ತೇನೆ ಎಂದು ತಲಾ ಒಬ್ಬರಿಗೆ 6 ಲಕ್ಷದಂತೆ 18 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದ.
ಗಾಯತ್ರಿ 14 ಲಕ್ಷ ಹಣವನ್ನು ಹಂತ-ಹಂತವಾಗಿ ನೀಡಿದ್ದರು. ಆದರೆ ಹಣ ಕೊಟ್ಟು ಒಂದೂವರೆ ವರ್ಷ ಕಳೆದರೂ ಕೆಲಸ ಸಿಕ್ಕಿಲ್ಲ. ಕೊಟ್ಟಿದ್ದ ಹಣವೂ ವಾಪಸ್ ಸಿಗಲಿಲ್ಲ. ಇದರಿಂದ ಕಂಗಾಲಾದ ಗಾಯತ್ರಿ ಹಣ ಕೊಟ್ಟ ದಾಖಲೆ ಸಮೇತ ಮಂಡ್ಯ ಪೂರ್ವ ಠಾಣೆಗೆ ದೂರು ನೀಡಿದ್ದರು.
ಇದೇ ವೇಳೆ ಮಲ್ಲೇಶ್ ಎಂಬವರಿಂದ ಹೆಂಡತಿಗೆ ಕೆಲಸ ಕೊಡಿಸುವುದಾಗಿ 19 ಲಕ್ಷ ಹಾಗೂ ನೇತ್ರಾವತಿ ಎಂಬವರ ಪುತ್ರನಿಗೆ ನೌಕರಿ ಕೊಡಿಸುವುದಾಗಿ 18 ಲಕ್ಷ ಹಣ ಪಡೆದು ವಂಚಿಸಿರುವ ಬಗ್ಗೆ ದೂರು ದಾಖಲಾಗಿದೆ. ಪೊಲೀಸರು ತನಿಖೆ ಚುರುಕುಗೊಳಿಸಿದ್ದೇ ತಡ ಈತನ ವಂಚನೆ ಪುರಾಣ ಒಂದೊಂದೇ ಬೆಳಕಿಗೆ ಬಂದಿದೆ.
ಹಣ ಪಡೆಯುತ್ತಿದ್ದಂತೆ ಈತ, ನೀವು ಶಿಕ್ಷಣ ಇಲಾಖೆ ಉಪನಿರ್ದೇಶಕರಾಗಿ ನೇಮಕವಾಗಿದ್ದೀರಿ ಎಂದು ನಕಲಿ ನೇಮಕಾತಿ ಪತ್ರ ನೀಡುತ್ತಿದ್ದ. ಅಲ್ಲದೇ ಅಂಕಪಟ್ಟಿ, ದಾಖಲೆ ಪರಿಶೀಲನೆ ಇದೆ ಎಂದು ನೇರ ವಿಧಾನಸೌಧಕ್ಕೂ ಕರೆದುಕೊಂಡು ಹೋಗಿ ತಾನೇ ಅಧಿಕಾರಿ ಬಳಿ ಓಡಾಡುವಂತೆ ನಟಿಸಿದ್ದ.
ಸಿಎಂ, ಸಚಿವರು, ಚೀಫ್ ಸೆಕ್ರೆಟರಿ ಸೇರಿದಂತೆ ಹಲವರ ಸಹಿಯಲ್ಲದೇ ವಿವಿಧ ಇಲಾಖೆಗಳ ಲೆಟರ್ ಹೆಡ್, ಸೀಲುಗಳನ್ನ ಮನೆಯಲ್ಲಿಯೇ ನಕಲು ಮಾಡುತ್ತಿರುವುದು ಮಹಜರು ವೇಳೆ ಪತ್ತೆಯಾಗಿದೆ. ಹತ್ತು ಹಲವು ಐಡಿ ಕಾರ್ಡ್ಗಳು ಪರಿಶೀಲನೆ ವೇಳೆ ದೊರೆತಿವೆ.
ವಂಚಕ ವೆಂಕಟೇಶ್ ಈ ರೀತಿ 30ಕ್ಕೂ ಹೆಚ್ಚು ಜನರಿಂದ 2 ಕೋಟಿಗೂ ಅಧಿಕ ಹಣ ಪಡೆದು ವಂಚನೆ ಮಾಡಿರುವ ಶಂಕೆ ಇದೆ. ದೊಡ್ಡ ಜಾಲವೂ ಇದರ ಹಿಂದೆ ಇದೆ ಎಂಬ ಮಾಹಿತಿಯಿದ್ದು, ಮಂಡ್ಯ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.